Popular Posts

Thursday, December 30, 2010

ಆತ್ಮೀಯ ಕಲಾಭಿಮಾನಿಗಳೇ ಯಾಕೆ ಹೀಗಾಗಿದೆ????

ಮೆಲ್ಲುಸಿರೆ ಸವಿಗಾನ, ದೋಣಿ ಸಾಗಲಿ ಮುಂದೆ ಹೋಗಲಿ, ಇವಳು ಯಾರು ಬಲ್ಲೆಯೇನು ಇತ್ಯಾದಿ ಹೃದಯಸ್ಪರ್ಶಿ ಹಾಡುಗಳಿಂದ ನಮ್ಮ ಮನಸೂರೆಗೊಂಡಿದ್ದ ನಮ್ಮ ಕನ್ನಡ ಚಿತ್ರರಂಗಕ್ಕೆ ಈಗ ಏನಾಗಿದೆ??? ಹಳೆ ಪಾತ್ರೆ ಹಳೆ ಕಬ್ಬಿಣ, ಹೊಡಿ ಮಗ ಹೊಡಿ ಮಗ, ಕೆಂಚಾಲೋ ಮಂಚಾಲೋ ಜೊತೆಗೆ ಮಚ್ಚು ಲಾಂಗುಗಳನ್ನೂ ಹಾಡುಗಳಲ್ಲಿ ತುರುಕುತ್ತಿರುವ ಇವರಿಗೆಲ್ಲಾ ಏನಾಗಿದೆ? ಬರೀ ಹಣ ಶಿಳ್ಳೆಗಳಷ್ಟೇ ಮುಖ್ಯವೇ? ಕಲಾವಿದರಾಗಿ ಈ ನಾಡಿನ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕಾದ ಮಹತ್ವದ ಜವಾಬ್ದಾರಿಯನ್ನು ಇವರುಗಳು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಕ್ಷಮಿಸಿ ನಾನು ಇಂದಿನ ಎಲ್ಲ ಚಿತ್ರಗಳನ್ನೂ ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಮುಂಗಾರು ಮಳೆಯ ಹಾಡುಗಳು ಎಲ್ಲರನ್ನು ರಂಜಿಸಿದ್ದು ನನ್ನ ನೆನಪಿನಲ್ಲಿ ಹಸಿರಾಗಿದೆ.ಈ ಕೀಳು ಅಭಿರುಚಿಯ ಹಾಡುಗಳಿಗೆ ಕೊನೆ ಎಂದು ಎಂಬುದಷ್ಟೇ ನನ್ನ ಅಳಲು. ದಯವಿಟ್ಟು ತಮ್ಮ ಮುಕ್ತ ಅಭಿಪ್ರಾಯ ತಿಳಿಸಿರಿ.

Wednesday, December 29, 2010

ಬನ್ನಿ ಸ್ವಾಗತಿಸೋಣ ಹೊಸ ವರುಷವ

ಬನ್ನಿ ಸ್ವಾಗತಿಸೋಣ ಹೊಸ ವರುಷವ
ಬಲು ಹರುಷದಿ ನವ ಉತ್ಸಾಹದಿ.
ಮರೆಯೋಣ ಹಿಂಸೆ ನೋವು ಇತ್ಯಾದಿ
ಸಾಗೋಣ ಮುಂದೆ ಮುಂದೆ ಧೃಢ ಸಂಕಲ್ಪದಿ.

ಆಗೋ ನೋಡಿ ಉದಯರವಿಯನೊಮ್ಮೆ!
ನಿನ್ನೆ ಇಲ್ಲೇನೂ ನೆಡೆದಿಲ್ಲವೆನ್ನುವವನಂತೆ
ಹಸಿರ ಸೆರೆಗಿನ ಮೇಲೆ
ಇಬ್ಬನಿ ಪರದೆಯ ಕವುಚಿ
ಬೆಚ್ಚಗೆ ನಿದ್ರಿಸುತ್ತಿರುವ
ತನ್ನ ನಲ್ಲೆಗೆ ನೆಚ್ಚನೆಯ
ಕಚಗುಳಿಯಿಟ್ಟು ರಮಿಸುತ್ತಿದ್ದಾನೆ!
ಇಬ್ಬನಿಯ ಪರದೆಗೋ ಮುತ್ತಿನ ಮಳೆಗರೆದಿದ್ದಾನೆ!

ಈ ರಸ ವಿಸ್ಮಯವ ಕಂಡ ಚಂದ್ರ
ನಸು ನಾಚಿ ಮರೆಗೆ ಸರಿಯುತ್ತಿದ್ದಾನೆ!
ಆ ಮಹಾ ಸಾಗರದ ಅಲೆಗಳೋ
ತಾವೆಂದೂ ಸುನಾಮಿಯಾಗಿರಲೇ ಇಲ್ಲವೆಂಬಂತೆ
ಭೂರಮೆಯ ಪಾದಗಳನ್ನು ಮೃದುವಾಗಿ ಚುಂಬಿಸಿ
ಜಲಕ್ರೀಡೆಗೆ ಕೂಗಿ ಕರೆಯುತ್ತಿವೆ!

ಇನ್ನು ನಮಗ್ಯಾಕೆ ಬೇಕು?
ಆ ಬೇಕಿಲ್ಲದ ನೋವು ಸಂಕಟಗಳ ನೆನಪು?
ಈ ಭೂಮಿ ಸೂರ್ಯ ಚಂದ್ರ ಸಾಗರಗಳಾರಿಗೂ
ಇಲ್ಲದ ನಿನ್ನೆಯ ಚಿಂತೆ ಕಂತೆಗಳು?!!


ಬನ್ನಿ ಸ್ವಾಗತಿಸೋಣ ಹೊಸ ವರುಷವ
ಬಲು ಹರುಷದಿ ನವ ಉತ್ಸಾಹದಿ.
ಮರೆಯೋಣ ಹಿಂಸೆ ನೋವು ಇತ್ಯಾದಿ
ಸಾಗೋಣ ಮುಂದೆ ಮುಂದೆ ಧೃಢ ಸಂಕಲ್ಪದಿ.

ಆಹ್, ಎಂತಹ ಹೆಮ್ಮೆಯ ಕ್ಷಣಗಳಿವು!!!!

ಬರೀ ಹಗರಣಗಳು, ವಂಚನೆಯ ಸುದ್ದಿಗಳನ್ನು ಓದಿ ಓದಿ ಬೇಸರಗೊಂಡಿದ್ದ ನಮಗೆಲ್ಲಾ ಅಪರೂಪಕ್ಕೆಂಬಂತೆ ಸಂತೋಷದ ಕ್ಷಣಗಳು ಎದುರಾಗಿವೆ! ಈ ವರ್ಷದ ಶ್ರೇಷ್ಠ ಭಾರತೀಯ ಕ್ರೀಡಾಪಟುವಿನ ಆಯ್ಕೆ ಮಾಧ್ಯಮಗಳಿಗೆ ತುಸು ತ್ರಾಸದಾಯಕವಾಗಿಬಿಟ್ಟಿದೆ!!! ಯಾಕೆಂದರೆ ಆ ಪಟ್ಟಿ ಬಹು ದೊಡ್ಡದಿದೆ!!! ಸಚಿನ್‌, ಸೈನಾ, ಸೋಮ್ ದೇವ್, ವಿ.ಆನಂದ್, ಅಡ್ವಾಣಿ, ಅಶ್ವಿನಿ, ವಿಜೇಂದರ್,  ಸುಶಿಲ್ ಕುಮಾರ್ ಹೀಗೆ ಬೆಳೆಯುತ್ತಲೇ ಇದೆ. ಇವರೆಲ್ಲರ ಜೊತೆಗೆ ಗ್ರೇಟ್ ವಾಲ್ ಖ್ಯಾತಿಯ ನಮ್ಮ ದ್ರಾವಿಡ್ ಈಗತಾನೆ 12000 ಸಾವಿರ ರನ್‌ ದಾಟಿ, ಮತ್ತೊಂದು ಮಹತ್ವದ ಮೈಲಿಗಲ್ಲಾದ 200 ಕ್ಯಾಚ್ ಗಳ ಸನಿಹ ಬಂದಿದ್ದಾರೆ. ಯಾರೇ ಆಯ್ಕೆಯಾಗಲಿ, ಆದರೆ ಇದಂತೂ ನಮಗೆ ಅತ್ಯಂತ ಹೆಮ್ಮೆಯ, ಅತೀವ ಸಂತೋಷದ, ಬಲು ಅಪರೂಪದ ಕ್ಷಣಗಳು ಎಂಬುದರಲ್ಲಿ ಎರಡುಮಾತಿಲ್ಲ. ಹೌದಲ್ಲವೇ???